JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Wednesday, February 19, 2025

Ramakrishna Paramahamsa Information

  Jnyanabhandar       Wednesday, February 19, 2025
Ramakrishna Paramahamsa Information 

*ರಾಮಕೃಷ್ಣ ಪರಮಹಂಸರ ಸ್ಮರಣೆಯಲ್ಲಿ*.....
      ಭಾರತೀಯ ಹಿಂದೂ ಸನ್ಯಾಸಿ ಮತ್ತು ತತ್ವಜ್ಞಾನಿ.

       ಶ್ರೀ ರಾಮಕೃಷ್ಣ ಪರಮಹಂಸರು
   ( ಫೆಬ್ರವರಿ 18, 1836 ರಲ್ಲಿ ಜನನ. ಆಗಸ್ಟ್ 16, 1886 ರಲ್ಲಿ ಮರಣ ) 
    ಭಾರತದ ಪ್ರಸಿದ್ಧ ಧಾರ್ಮಿಕ ನೇತಾರರುಗಳಲ್ಲಿ ಒಬ್ಬರು. ಕಾಳಿಯ ಆರಾಧಕರಾಗಿದ್ದ ಪರಮಹಂಸರು ಅದ್ವೈತ ವೇದಾಂತ ಸಿದ್ಧಾಂತವನ್ನು ಬೋಧಿಸಿದರಲ್ಲದೆ, ಎಲ್ಲ ಧರ್ಮಗಳೂ ಒಂದೇ ಗುರಿಯತ್ತ ನಮ್ಮನ್ನು ಒಯ್ಯುತ್ತವೆ ಎಂದು ನಂಬಿದ್ದರು. 19 ನೆಯ ಶತಮಾನದ ಹಿಂದೂ ಧರ್ಮದ ಪುನರುಜ್ಜೀವನಕ್ಕೆ ದಾರಿ ಮಾಡಿಕೊಟ್ಟ ವ್ಯಕ್ತಿಗಳಲ್ಲಿ ಪರಮಹಂಸರೂ ಒಬ್ಬರು. ಇವರ ಮೊದಲ ಹೆಸರು "ಗಧಾದರ".

       ರಾಮಕೃಷ್ಣ ಪರಮಹಂಸರ ಜೀವನ ಮತ್ತು ಬೋಧನೆಗಳು  ಭಾರತೀಯ ಸಂಸ್ಕೃತಿ, ನಂಬಿಕೆಗಳ ಮೇಲೆ ಆಳವಾದ ಪ್ರಭಾವ ಬೀರಿವೆ. ಅವರ ವಿಚಾರಗಳು ಈಗಿನ ಯುವ ತಲೆಮಾರಿಗೆ ಪ್ರೇರಣಾದಾಯಕ. ಬದುಕಿನ ಸಂಕಷ್ಟ, ಸವಾಲುಗಳಿಗೆ ಮುಖಾ ಮುಖಿಯಾಗುವುದು ಹೇಗೆ ಅನ್ನುವ ಸಂಗತಿಯನ್ನು ಅರ್ಥ ಮಾಡಿಸುವಂತಿವೆ.

       ರಾಮಕೃಷ್ಣ ಪರಮಹಂಸರು ಭಾರತದ ಪ್ರಸಿದ್ಧ ಸಂತ. ಕಾಳಿಯ ಆರಾಧಕರಾಗಿದ್ದ ಪರಮಹಂಸರು ಅದ್ವೈತ ವೇದಾಂತ ಸಿದ್ಧಾಂತವನ್ನು ಬೋಧಿಸಿ, ಎಲ್ಲ ಧರ್ಮಗಳೂ ಒಂದೇ ಗುರಿಯತ್ತ ನಮ್ಮನ್ನು ಒಯ್ಯುತ್ತವೆ ಎಂಬುದನ್ನು ನಂಬಿದ್ದರು. 19 ನೇ ಶತಮಾನದಲ್ಲಿ ಹಿಂದೂ ಧರ್ಮದ ಪುನರುಜ್ಜೀವನಕ್ಕೆ ಕಾರಣರಾದ ಗಣ್ಯರಲ್ಲಿ ಪರಮಹಂಸರೂ ಒಬ್ಬರು.

       ಪರಮಹಂಸರು ತಾನು ಅನುಭವಿಸಿದ ನಿರ್ವಿಕಲ್ಪ ಸಮಾಧಿಯಿಂದ ಅವಿದ್ಯಾಮಾಯೆ ಮತ್ತು ವಿದ್ಯಾಮಾಯೆ ಎಂಬ ಎರಡು ಬಗೆಯ ಮಾಯೆಗಳನ್ನು ಅರಿತುಕೊಂಡರು. ಅವಿದ್ಯಾಮಾಯೆ ಎಂಬುದು ಸೃಷ್ಟಿಯ ಕಾಳ ಶಕ್ತಿಗಳನ್ನು ಪ್ರತಿನಿಧಿಸುತ್ತದೆ (ಕ್ರೌರ್ಯ, ಲೋಭ, ಇತ್ಯಾದಿ). ವಿದ್ಯಾಮಾಯೆ ಎನ್ನುವುದು ಸೃಷ್ಟಿಯ ಉಚ್ಚತಮ ಶಕ್ತಿಗಳನ್ನು ಪ್ರತಿನಿಧಿಸುತ್ತದೆ (ಪ್ರೇಮ, ಆಧ್ಯಾತ್ಮಿಕ ದೃಷ್ಟಿ ಇತ್ಯಾದಿ).

      ಜನರು ನಂಬುವ ಎಲ್ಲ ದೇವರುಗಳೂ ಒಬ್ಬ ಸರ್ವಾಂತರ್ಯಾಮಿಯಾದ ದೇವನನ್ನು ನೋಡುವ ವಿವಿಧ ಬಗೆಗಳು ಎಂಬುದು ನಿರ್ವಿಕಲ್ಪ ಸಮಾಧಿಯಿಂದ ಹುಟ್ಟಿದ ಇನ್ನೊಂದು ನಂಬಿಕೆ. ಇವರ ಜೀವನ ದ್ವೈತ, ಅದ್ವೈತ, ವಿಶಿಷ್ಟಾದ್ವೈತಗಳ ತ್ರಿವೇಣಿ. ಜ್ಞಾನ, ಭಕ್ತಿ, ಯೋಗ ಇಲ್ಲಿ ಸಂಧಿಸಿವೆ.  ಹೇ ಚಿ.

ಇವರು ವಿದ್ವಾಂಸರ ಸಾಲಿನಲ್ಲಿ ಗುರುತಿಸಿಕೊಂಡವರಲ್ಲ. ದೊಡ್ಡ ವಾಗ್ಮಿಗಳಲ್ಲ. ಉಪನ್ಯಾಸ ನೀಡಲು ಜೀವನವನ್ನು ಬಳಸಿಕೊಂಡವರಲ್ಲ. ಜೀವನದ ಬಹುಪಾಲನ್ನು ದಕ್ಷಿಣೇಶ್ವರ ದೇವಾಲಯದ ವಲಯದಲ್ಲಿ ಕಳೆದವರು. ಇವರು ಹುಟ್ಟು ಕಲೋಪಾಸಕರು. ಬಾಹ್ಯ ಪ್ರಪಂಚದ ಮನ ಸೆಳೆವ ಬಣ್ಣ, ಆಕಾರ, ಭಾವ, ಧ್ವನಿ ಇವುಗಳೆಲ್ಲ ಇಂದ್ರಿಯಾತೀತ ಪ್ರಪಂಚದೆಡೆಗೆ ಇವರನ್ನು ಕೈ ಬೀಸಿ ಕರೆಯುತ್ತಿದ್ದವು.

      ಪರಮಹಂಸರು ಒಮ್ಮೆ ಗದ್ದೆಯ ಬಯಲಿನಲ್ಲಿ ನಡೆಯುತ್ತಿದ್ದರು. ಮೋಡ ಕವಿದ ವಾತಾವರಣ. ಕ್ರಮೇಣ ವಿಸ್ತಾರವಾಗಿ ಆಕಾಶವನ್ನೆಲ್ಲ ವ್ಯಾಪಿಸಿತ್ತು. ಅದರ ಕೆಳಗೆ ಬಕಪಕ್ಷಿಗಳ ಸಾಲು ಹಾರಿಹೋಗುತ್ತಿತ್ತು. ಈ ಬಣ್ಣಗಳ ವೈವಿಧ್ಯವನ್ನು ನೋಡುತ್ತಲೇ ರಾಮಕೃಷ್ಣರು ಸಂಪೂರ್ಣ ತನ್ಮಯರಾಗಿ ಬಾಹ್ಯಪ್ರಪಂಚವನ್ನು ಮರೆತುಬಿಟ್ಟರಂತೆ. ಅವರಿಗೆ ಬಾಹ್ಯಪ್ರಜ್ಞೆ ಬಂದಿದ್ದು ಸ್ವಲ್ಪ ಹೊತ್ತಾದ ಮೇಲೆ.

  ಶಿವರಾತ್ರಿಯ ಕಥೆ.
ಶಿವರಾತ್ರಿಯಂದು ರಾಮಕೃಷ್ಣರು ಮನೆಯಲ್ಲೇ ಪೂಜೆಗೆ ಸಿದ್ಧವಾಗುತ್ತಿದ್ದರು. ಊರಿನಲ್ಲಿ ಎಲ್ಲರ ಜಾಗರಣೆಗೆಂದು ಬಯಲುನಾಟಕ ಮಾಡಲು ಸ್ಥಳೀಯರು ಸಿದ್ಧರಾಗುತ್ತಿದ್ದರು. ನಾಟಕ ಆರಂಭವಾಗುವ ವೇಳೆ ಶಿವನ ಪಾತ್ರಧಾರಿ ಅನಾರೋಗ್ಯದ ಕಾರಣ ಬಂದಿರಲಿಲ್ಲ. ಆಗ ಸ್ನೇಹಿತರು ರಾಮಕೃಷ್ಣರನ್ನು ಶಿವನ ಪಾತ್ರ ಮಾಡುವಂತೆ ಕೇಳಿಕೊಂಡರು. ಆದರೆ ಶಿವ ಪೂಜೆ ಇದ್ದ ಕಾರಣ ಆರಂಭದಲ್ಲಿ ಒಪ್ಪದಿದ್ದರೂ ಬಳಿಕ ಸಮ್ಮತಿಸಿ ಭಸ್ಮ ಬಳಿದು ಜಟಾಧಾರಿಯಾಗಿ ರಂಗಭೂಮಿಗೆ ಬಂದರು.
ರಾಮಕೃಷ್ಣರು ತಾನು ವೇದಿಕೆಯಲ್ಲಿ ನಟಿಸುತ್ತಿದ್ದೇನೆ ಎಂಬುದನ್ನು ಮರೆತು ಶಿವಧ್ಯಾನದಲ್ಲಿ ತಲ್ಲೀನರಾದರು. ಕಣ್ಣಿನಿಂದ ಆನಂದಬಾಷ್ಪ ಸುರಿಯತೊಡಗಿತು. ಬಾಹ್ಯ ಪ್ರಪಂಚದ ಅರಿವನ್ನು ಮರೆತರು. ನೆರೆದ ಪ್ರೇಕ್ಷಕ ವೃಂದಕ್ಕೆ ಶಿವನ ಪಾತ್ರಧಾರಿ ಕಾಣಿಸಲೇ ಇಲ್ಲ. ಶಿವನಲ್ಲಿ ಐಕ್ಯನಾದ ಶಿವಭಕ್ತನೇ ಕಂಡನು. ಅವರನ್ನು ಮನೆಗೆ ಕರೆದುಕೊಂಡು ಹೋದರು. ಹೇ ಚಿ ಇಹದ ಅರಿವುಂಟಾದದ್ದು ಮಾರನೇ ದಿನ.

    ದೇವಿಯ ಆರಾಧಕ.
ಮತ್ತೊಂದಿನ ವಿಶಾಲಾಕ್ಷಿಯ ದೇವಸ್ಥಾನಕ್ಕೆ ಕೆಲವು ಹೆಂಗಸರೊಂದಿಗೆ ಹೋಗುತ್ತಿದ್ದರು. ಆ ಹೆಂಗಸರು ನಡೆದುಕೊಂಡು ಹೋಗುತ್ತಿರುವಾಗ ದೇವಿಯ ಹಾಡುಗಳನ್ನು ಹೇಳಲಾರಂಭಿಸಿದರು. ತತ್‌ಕ್ಷಣವೇ ರಾಮಕೃಷ್ಣರು ಸ್ಥಿರವಾಗಿ ನಿಂತರು. ಕಣ್ಣಿನಲ್ಲಿ ಅಶ್ರುಧಾರೆ ಹರಿಯತೊಡಗಿತು. ಪ್ರಪಂಚದ ಅರಿವೇ ಇರಲಿಲ್ಲ. ಹೆಂಗಸರು ಎಷ್ಟೇ ಉಪಚಾರ ಮಾಡಿದರೂ ಪ್ರಜ್ಞೆ ಬರಲಿಲ್ಲ. ಬಳಿಕ ದೇವರ ಹೆಸರನ್ನು ಅವರ ಕಿವಿಯಲ್ಲಿ ಹೇಳಿದಾಗ ಬಾಹ್ಯಪ್ರಪಂಚದ ಅರಿವಾಯಿತಂತೆ. ರಾಮಕೃಷ್ಣರು ಹಲವು ದೇವದೇವಿಯರ ವಿಗ್ರಹಗಳನ್ನು ತಾವೇ ರಚಿಸಿ ಪೂಜಿಸುತ್ತಿದ್ದರು.

   ಸಾಧುವಾದ ಕಥೆ.
ರಾಮಕೃಷ್ಣರ ಮನೆಯ ಹತ್ತಿರವೇ ಅನೇಕ ಸಾಧು-ಸಂತರು ಉಳಿದುಕೊಳ್ಳುತ್ತಿದ್ದ ಛತ್ರವಿತ್ತು. ಅಲ್ಲಿಗೆ ಪದೇಪದೇ ಹೋಗುತ್ತಿದ್ದರು. ಸಾಧುಗಳೊಡನೆ ಮಾತನಾಡುವುದು, ಹೇಳಿದ್ದನ್ನು ಭಕ್ತಿಯಿಂದ ಕೇಳುವುದು, ಸಣ್ಣಪುಟ್ಟ ಕೆಲಸಗಳಲ್ಲಿ ನೆರವಾಗುವುದು ಅವರಿಗೆ ಪರಮಪ್ರಿಯ. ಒಮ್ಮೆ ಸಾಧುವಾಗಬೇಕೆಂದು ಬಯಸಿ ಮೈಗೆ ಬೂದಿ ಬಳಿದುಕೊಂಡು ಬಟ್ಟೆಯನ್ನು ಬೈರಾಗಿಯಂತೆ ಉಟ್ಟು ಮನೆಗೆ ಬಂದರು. 
“ತಾನು ಸಾಧುವಾಗಿಬಿಟ್ಟೆ"
 ಎಂದು ತಾಯಿಗೆ ತಿಳಿಸಿದರು. ಇದನ್ನು ನೋಡಿ ಹೆತ್ತ ಕರುಳು ತಳಮಳಿಸಿತು. ಅದನ್ನು ಕಂಡು ರಾಮಕೃಷ್ಣರು ಬೈರಾಗಿ ವೇಷವನ್ನು ತೆಗೆದು ಹೇ ಚಿ ಹಾಕಿದರು. 

ಜಗನ್ಮಾತೆಗಾಗಿ ಹಪಹಪಿಸಿದರು.
ರಾಮಕೃಷ್ಣರು ಪೂಜೆ ಪ್ರಾರಂಭಿಸಿದ್ದು ದಕ್ಷಿಣೇಶ್ವರದಲ್ಲಿ. ಸ್ವಾಮಿ ವಿವೇಕಾನಂದರಂತಹ ಶಿಷ್ಯರನ್ನು ತಯಾರುಗೊಳಿಸಿದ್ದು ಅಲ್ಲೇ. ಬೆಳಗ್ಗೆ ಭಕ್ತಿಯಿಂದ ಕಂಪಿಸುತ್ತ ಗುಡಿಗೆ ಹೋಗುವರು. ದೇವಿಗೆ ಅಲಂಕಾರ ಮಾಡಿ  ಪೂಜೆ ಮಾಡುತ್ತಿದ್ದರು. ಇದು ಸಾಮಾನ್ಯ ಭಾಷೆಯಲ್ಲಿ ಹೇಳುವಂತೆ ಅತಿರೇಕಕ್ಕೆ ಹೋಗಿ ಜನರಿಂದ ದೂರವಾದರು. ತನ್ನದೇ ಪ್ರಪಂಚದಲ್ಲಿ ವಿಹರಿಸತೊಡಗಿದರು. ಜಗನ್ಮಾತೆಯನ್ನು ನೋಡಬೇಕೆಂಬ ಆಸೆ ಕಾಡುಗಿಚ್ಚಿನೋಪಾದಿ ಅವರ ಜೀವನವನ್ನೆಲ್ಲ ವ್ಯಾಪಿಸಿತು.
        ದೇವಿಗಾಗಿ ಹಂಬಲಿಸಿ ಅತ್ತರು, ಪ್ರಾರ್ಥಿಸಿದರು, ಧ್ಯಾನ ಮಾಡಿದರು. ಆದರೂ ದೇವಿ ಮೈದೋರಲಿಲ್ಲ. ಒಂದು ದಿನ ಗರ್ಭಗುಡಿಯೊಳಗೆ ಇರುವಾಗ ದೇವಿಯ ದರ್ಶನ ಪಡೆಯದ ಬಾಳು ನಿರರ್ಥಕ, ಇದು ಕೊನೆಗಾಣಲಿ ಎಂದು ಬಲಿ ಕತ್ತಿಯನ್ನು ತೆಗೆದುಕೊಂಡು ತಮ್ಮ ರುಂಡವನ್ನು ದೇವಿಯ ಅಡಿದಾವರೆಯಲ್ಲಿ ಅರ್ಪಿಸಲು ಮುಂದಾದರು.
        ಜಗನ್ಮಾತೆ ಪ್ರತ್ಯಕ್ಷಳಾದಳು. ಸಚ್ಚಿದಾನಂದ ಸ್ವರೂಪಿಣಿಯಲ್ಲಿ ರಾಮಕೃಷ್ಣರ ಮನಸ್ಸು ತಲ್ಲೀನವಾಯಿತು. ಬಾಹ್ಯ ಪ್ರಪಂಚಕ್ಕೆ ಬಂದ ಮೇಲೆ ಅವರ ನಡತೆ ಸಂಪೂರ್ಣ ಬದಲಾಯಿಸಿತು. ಅವರ ಪಾಲಿಗೆ ಕಲ್ಲಿನ ವಿಗ್ರಹ ಮಾಯವಾಗಿ, ಅದೊಂದು ಸಚೇತನ ಮೂರ್ತಿಯಾಯಿತು. ಪೂಜಾ ವಿಧಾನವೇ ಬೇರೆ ರೂಪು ತಾಳಿತು. ಅವರಿತ್ತ ನೈವೇದ್ಯವನ್ನು ದೇವಿ ಸ್ವೀಕರಿಸುತ್ತಿದ್ದಳು. ತಾಯಿ-ಮಗುವಿನ ಸಲುಗೆಯಂತೆ ಅವರಿಬ್ಬರಿದ್ದರು.

  ಪೂಜಾ ಕ್ರಮ.
ರಾಮಕೃಷ್ಣರ ಪೂಜಾ ವಿಧಾನ ಬೇರೆ ರೂಪಕ್ಕೆ ತಿರುಗಿತು. ನೈವೇದ್ಯವನ್ನು ದೇವಿಗೆ ಅರ್ಪಿಸುವುದಕ್ಕೆ ಮೊದಲು ತಾನು ರುಚಿ ನೋಡುವರು. ಹೂವು, ಗಂಧಾದಿಗಳನ್ನು ದೇವಿಗೆ ಅರ್ಪಣೆ ಮಾಡುವುದಕ್ಕೆ ಮುನ್ನ ಜಗನ್ಮಾತೆ ತನ್ನಲ್ಲಿಯೂ ಇರುವಂತೆ ಭಾಸವಾಗಿ ತನ್ನನ್ನೇ ಹೇ ಚಿ ಅಲಂಕರಿಸಿಕೊಳ್ಳುತ್ತಿದ್ದರು.

 ಶಾರದಾದೇವಿ.
ರಾಮಕೃಷ್ಣರು ಶಾಸ್ತ್ರೀಯವಾಗಿ ಶಾರದಾದೇವಿಯನ್ನು ವಿವಾಹವಾಗಿದ್ದರು. ಬಲಾತ್ಕಾರವಾಗಿ ಏನನ್ನೂ ಶಾರದಾದೇವಿಯವರ ಮೇಲೆ ಹೇರಲಿಲ್ಲ. 
“ನನಗೆ ಎಲ್ಲ ಸ್ತ್ರೀಯರೂ ಜಗನ್ಮಾತೆಯ ಪ್ರತಿಬಿಂಬದಂತೆ ಕಾಣುವರು. ನಾನು ನಿನ್ನಲ್ಲಿಯೂ ಅದನ್ನೇ ನೋಡುತ್ತೇನೆ. ಆದರೆ ನೀನು ಇಂದ್ರಿಯ ಪ್ರಪಂಚದಲ್ಲಿ ಇರಲು ಇಚ್ಛೆಪಟ್ಟರೆ ಅದಕ್ಕೂ ನಾನು ಸಿದ್ಧನಾಗಿರುವೆ. ನಿನಗೆ ಯಾವುದು ಬೇಕು ಹೇಳು" 
ಎಂದು ಶಾರದಾದೇವಿಯವರಲ್ಲಿ ಕೇಳಿದ್ದರು. ಶಾರದಾದೇವಿ ತಾನೂ ಅವರಂತೆಯೇ ಆಗಲು ಬಯಸಿದ್ದರು. ಇದನ್ನು ಕೇಳಿ ರಾಮಕೃಷ್ಣರಿಗೆ ಅತ್ಯಾನಂದವಾಯಿತು. ಗಂಡ ಹೆಂಡಿರಿಬ್ಬರೂ ಆಜನ್ಮ ಬ್ರಹ್ಮಚರ್ಯ ವ್ರತಧಾರಿಗಳಾಗಿ ಜಗನ್ಮಾತೆಯ ಕೆಲಸಕ್ಕೆ ಟೊಂಕಕಟ್ಟಿ ನಿಂತರು. ಶಾರದಾದೇವಿಯವರು ಯಾವಾಗ ಪ್ರಾಪಂಚಿಕ ಸುಖವನ್ನು ತೊರೆದು ಜಗನ್ಮಾತೆಯ ಭಕ್ತರಾಗಲು ಬಯಸಿದರೋ ಅಂದಿನಿಂದಲೇ ರಾಮಕೃಷ್ಣರು ಸತಿಯ ಜೀವನದ ಜವಾಬ್ದಾರಿಯನ್ನೆಲ್ಲ ವಹಿಸಿಕೊಂಡರು. ಸಂಸಾರದಲ್ಲಿ ಹೇಗೆ ನಡೆದುಕೊಳ್ಳಬೇಕು, ಪೂಜೆ, ಜಪ, ತಪ, ಸಾಧನೆಗಳನ್ನು ಹೇಗೆ ಮಾಡಬೇಕು ಎಂಬುದರಿಂದ ಹಿಡಿದು ನಿರ್ವಿಕಲ್ಪ ಸಮಾಧಿಯವರೆಗೆ ಪತ್ನಿಯನ್ನು ಆಧ್ಯಾತ್ಮಿಕ ಸಾಧನೆಯ ಮಾರ್ಗದಲ್ಲಿ ಕರೆದುಕೊಂಡು ಹೋದರು.

 ವಿದ್ಯಾಸಾಗರರ ಭೇಟಿ.
ಒಂದು ಬಾರಿ ರಾಮಕೃಷ್ಣರು ಈಶ್ವರಚಂದ್ರ ವಿದ್ಯಾಸಾಗರರನ್ನು ನೋಡುವುದಕ್ಕೆ ಹೋದರು. ಘನವಿದ್ವಾಂಸರಾದ ಈಶ್ವರಚಂದ್ರರು ಪರಮಹಂಸರ ಬಾಯಿಯಿಂದ ಬರುವ ಮಾತನ್ನು ಕೇಳಿದರು. ಶಾಸ್ತ್ರಗಳ ಜಟಿಲ ಸಮಸ್ಯೆಯನ್ನು ಕೂಡ ರಾಮಕೃಷ್ಣರು ಬಗೆಹರಿಸಬಲ್ಲರೆಂದು ತಿಳಿದರು. ಮುಂದೆ ಪ್ರಪಂಚವನ್ನೇ ವಿಸ್ಮಯಗೊಳಿಸಿದ ಸ್ವಾಮಿ ವಿವೇಕಾನಂದರಂತಹ ಶಿಷ್ಯರೂ ಪರಮಹಂಸರಿಗೆ ಲಭಿಸಿದರು. ಒಮ್ಮೆ ರಾಮಕೃಷ್ಣರ ಗಂಟಲಲ್ಲಿ ಹುಣ್ಣಾಯಿತು. ಹೇ ಚಿ ಮಾತನಾಡದಂತೆ ವೈದ್ಯರು ಸೂಚಿಸಿದ್ದರೂ ಕೇಳುತ್ತಿರಲಿಲ್ಲ. ನನ್ನ ಮಾತಿನಿಂದ ಇತರರಿಗೆ ಒಳ್ಳೆಯದಾಗುವುದಾದರೇ ಇಂತಹ ನೋವನ್ನಾದರೂ ಸಹಿಸುತ್ತೇನೆ. ಭವಜೀವಿಗಳ ಉದ್ಧಾರಕ್ಕೆ ಎಷ್ಟು ಜನ್ಮಗಳನ್ನಾದರೂ ಎತ್ತಲು ಸಿದ್ಧನಾಗಿರುವೆ ಎಂಬುದನ್ನು ಉಚ್ಚರಿಸುತ್ತಿದ್ದರು.

      ರಾಮಕೃಷ್ಣರು ಭಕ್ತಿಗೆ ಹೆಚ್ಚು ಪ್ರಾಶಸ್ತ್ಯ ಕೊಡುತ್ತಿದ್ದರು. ಆದರೆ ಅದು ಅಂಧಭಕ್ತಿಯಲ್ಲ, ಜ್ಞಾನಭಕ್ತಿ. ಸ್ವಾಮಿ ವಿವೇಕಾನಂದರು “ರಾಮಕೃಷ್ಣರು ಹೊರನೋಟಕ್ಕೆ ಭಕ್ತರು, ಒಳಗೆ ಜ್ಞಾನಿಗಳು" ಎನ್ನುತ್ತಿದ್ದರು. ಒಂದು ದಿನ ಭಕ್ತನೊಬ್ಬನು ರಾಮಕೃಷ್ಣರೊಂದಿಗೆ ಮಾತನಾಡುತ್ತಿದ್ದಾಗ ತಾನು ಇತರರಿಗೆ ಉಪಕಾರ ಮಾಡಬೇಕೆಂದು ಹೇಳುತ್ತಿದ್ದನು. ಇದನ್ನು ಕೇಳಿ ರಾಮಕೃಷ್ಣರು, ಉಪಕಾರದ ಮಾತನ್ನು ಆಡಬೇಡ, ಇತರರಿಗೆ ಉಪಕಾರ ಮಾಡಬಲ್ಲಾತ ದೇವರೊಬ್ಬನೇ. ಸಾಧಾರಣ ಜೀವಿಗಳು ಸೇವೆಯನ್ನು ಮಾತ್ರ ಮಾಡಬಲ್ಲರು. ನಾವು ಮಾಡಿದರೆ ಅದು ಉಪಕಾರವಲ್ಲ, ಸೇವೆ ಎಂದರು.
       ಇಂದು ಇಂಥ ಮಹನೀಯರ ಹುಟ್ಟಿದ ದಿನ. ಈ ಮೂಲಕ ಅವರಿಗೆ ನಮ್ಮ ನಮನಗಳನ್ನು ಸಲ್ಲಿಸೋಣ.
logoblog

Thanks for reading Ramakrishna Paramahamsa Information

Previous
« Prev Post

No comments:

Post a Comment

If You Have any Doubts, let me Comment Here